== ಬನಸರ್ ಬಾಗ್ == ಬನಸರ್ ಉದ್ಯಾನ ಕೊಳದ ನಡುವೆ ಇದ್ದು ಅಮೃತ ಶಿಲೆಯ ಬರಾದಾರಿ (12 ಬಾಗಿಲುಗಳುಳ್ಳ ಕಟ್ಟಡ) ರಾತ್ರಿಯ ವೇಳೆ ಪ್ರವಾಸಿಗರಿಗೆ ಎಂದೂ ಮರೆಯಲಾಗದಂಥ ಅದ್ಭುತ ನೋಟವನ್ನು ನೀಡುತ್ತದೆ. ಅದೂ ಹುಣ್ಣಿಮೆಯ ದಿನಗಳಂದು ನೀರಿನ ಮೇಲೆ ಬೀಳುವ ಚಂದಿರನ ಬೆಳಕು ಮತ್ತಷ್ಟು ಮೆರುಗನ್ನು ನೀಡುತ್ತದೆ. ಈ ಹಿಂದೆ ಇದನ್ನು ಜಿಂದ್ ನ ರಾಜಮನೆತನದವರು ಬಳಸುತ್ತಿದ್ದರು, ಈಗ ಇದನ್ನು ಸಾರ್ವಜನಿಕರಿಗಾಗಿ ತೆರೆದಿಡಲಾಗಿದೆ. ವಾರದ ಎಲ್ಲಾ ದಿನಗಳಂದು ತೆರೆದಿರುವ ಇಲ್ಲಿ ಯಾವುದೇ ಶುಲ್ಕವನ್ನು ವಿಧಿಸಲಾಗಿಲ್ಲ. ಇಲ್ಲಿ ಒಂದು ಅರಮನೆಯೂ ಇದ್ದು ಇದನ್ನು ಈಗ ಒಂದು ವಸ್ತು ಸಂಗ್ರಹಾಲವಯವನ್ನಾಗಿ ಮಾಡಲಾಗಿದೆ ಹಾಗೂ ಇಲ್ಲಿ ಹಳೆಯ ಆಯುಧಗಳನ್ನು ಇಡಲಾಗಿದೆ. == ಗುರುದ್ವಾರಾ ಅಕೋಯಿ ಸಾಹಿಬ್ == ಸಂಗ್ರೂರ್ ನಿಂದ 5 ಕಿ.ಮೀ ದೂರದಲ್ಲಿ ಮಲೆರ್ ಕೋಟ್ಲಾ - ಸಂಗ್ರೂರ್ ರಸ್ತೆಯಲ್ಲಿನ ಅಕೋಯಿ ಹಳ್ಳಿಯಲ್ಲಿ ಗುರುದ್ವಾರಾ ಅಕೋಯಿ ಸಾಹಿಬ್ ಇದೆ. ಇಲ್ಲಿ ಸಿಖ್ಖರ ಮೊದಲನೆಯ, ಆರನೆಯ ಮತ್ತು ಒಂಬತ್ತನೆಯ ಗುರುಗಳು ಭೇಟಿ ನೀಡಿದ್ದಾರೆ ಎಂದು ನಂಬಲಾಗಿದೆ. ಇವರುಗಳೆಂದರೆ ಶ್ರೀ ಗುರುನಾನಕ್ ದೇವ್ ಜಿ, ಶ್ರೀ ಗುರು ಇ ಹರ್ಗೋಬಿಂದ್ ಜೀ ಮತ್ತು ಶ್ರೀ ಗುರು ತೇಜ್ ಬಹದ್ದೂರ್ ಜೀ. ಇಲ್ಲಿಗೆ ತಮ್ಮ ಭೇಟಿಯ ವೇಳೆ ಗುರು ಹರ್ಗೋಬಿಂದ್ ಜೀ ತಮ್ಮ ಕುದುರೆಯನ್ನು ಇಲ್ಲಿನ ಕರಿರ್ ಮರಕ್ಕೆ ಕಟ್ಟಿ ಹಾಕಿದ್ದರು . ಈ ಗುರುದ್ವಾರಾ ನಿರ್ಮಾಣವಾಗುತ್ತಿದ್ದಾಗ ಒಂದು ಮರವು ಆಕಸ್ಮಿಕವಾಗಿ ಈ ಸ್ಥಳದಲ್ಲಿ ಬಿದ್ದಿತು. ನಂತರ ಕಾಲಕ್ರಮೇಣ ಅದು ಇಲ್ಲಿಯೆ ಬೆಳೆದು ಹೆಮ್ಮರವಾಯಿತು. == ಶೀಷ್ ಮಹಲ್ == ಇದು ನಗರ ಕೇಂದ್ರದಿಂದ 22 ಕಿ.ಮೀ ಗಳ ದೂರದಲ್ಲಿದ್ದು ಸಂಗ್ರೂರ್ ನ ಪ್ರಮುಖ ಸ್ಥಳಗಳಲ್ಲಿ ಗುರುತಿಸಿಕೊಂಡಿದೆ. ಹೆಸರೇ ಹೇಳುವಂತೆ ಇಲ್ಲಿನ ಮಹಲ್ ಸುಂದರವಾದ ಮತ್ತು ಆಕರ್ಷಕವಾದ ಗಾಜಿನ ಆವರಣವನ್ನು ಹೊಂದಿದೆ ಹಾಗೂ ಇದಕ್ಕಾಗಿಯೇ ‘ಗಾಜಿನ ಅರಮನೆ’ ಎಂದು ಕರೆಯಿಸಿಕೊಳ್ಳುತ್ತದೆ. ಸುಂದರವಾದ ಉದ್ಯಾನಗಳು, ಛಾವಣಿ, ನೀರಿನ ಚಿಲುಮೆಗಳು ಹಾಗೂ ಒಂದು ಕೃತಕವಾದ ಸರೋವರ ಈ ಅರಮನೆಯನ್ನು ನೋಡಲು ಮತ್ತಷ್ಟು ಆಕರ್ಷಕವನ್ನಾಗಿಸಿವೆ. ಈ ಮಹಲ್ ಅನ್ನು ಮಹಾರಾಜ ನಾರಿಂದರ್ ಸಿಂಗ್ 1845 ರಲ್ಲಿ ಕಟ್ಟಿಸಿದ್ದನು ಹಾಗೂ ನಂತರದಲ್ಲಿ ಮಲೆರ್ ಕೋಟ್ಲಾ ದ ನವಾಬನಾಗಿ ಅಧಿಕಾರ ಮುಂದುವರೆಸಿದ್ದನು. ಈ ಅರಮನೆಗೆ ಪ್ರವಾಸಿಗರು ಬೆಳಗ್ಗಿನಿಂದ ಸಂಜೆಯ ತನಕ ಭೇಟಿ ನೀಡಬಹುದಾಗಿದೆ. ಇಲ್ಲಿ ಯಾವುದೇ ಶುಲ್ಕ ಇಲ್ಲದಿರುವು ವಿಶೇಷವಾಗಿದೆ. ನಗರಕೇಂದ್ರದಿಂದ ಇಲ್ಲಿಗೆ ಬರುವ ರಸ್ತೆಯು ಅತ್ಯುತ್ತಮ ಸ್ಥಿತಿಯಲ್ಲಿರುವುದರಿಂದ ಪ್ರವಾಸಿಗಳು ಯಾವುದೇ ಕ್ಯಾಬ್ ಅಥವಾ ಬಸ್ಸನ್ನೇರಿ ಕೇವಲ 25 ನಿಮಿಷಗಳ ಸಮಯದಲ್ಲಿ ಇಲ್ಲಿಗೆ ಬಂದು ತಲುಪಬಹುದಾಗಿದೆ. == ಗುರುದ್ವಾರಾ ನಾನಕ್ ಜೀರಾ ಸಾಹಿಬ್ == ಕಾಂಝಲಾ ಗ್ರಾಮದಲ್ಲಿರುವ ಗುರುದ್ವಾರಾ ನಾನಕ್ ಝೀರಾ ಸಾಹಿಬ್ ಶ್ರೀ ಗುರು ನಾನಕ್ ದೇವ್ ಜೀ, ಶ್ರೀ ಗುರು ಹರ್ಗೋಬಿಂದ್ ಸಾಹಿಬ್ ಜೀ ಮತ್ತು ಗುರು ತೇಗ್ ಬಹದ್ದೂರ್ ಜೀ ಯವರ ಆಗಮನದಿಂದ ಪವಿತ್ರವಾದ ಸ್ಥಳವಾಗಿದ್ದು ಸಂಗ್ರೂರ್ ನಿಂದ 18 ಕಿ.ಮೀ ದೂರದಲ್ಲಿದೆ. ಗುರು ನಾನಕ್ ದೇವ್ ಜೀ ತಮ್ಮ ಮೊದಲ ಪ್ರವಚನ ಪ್ರವಾಸ (ಉದಾಸಿ) ಯ ವೇಳೆಯಲ್ಲಿ ಇಲ್ಲಿಗೆ ಬಂದು ನೆಲೆಸಿದ್ದು ಇಲ್ಲಿನ ಗುರುಗಳಿಗೆ ಹಾಗೂ ಜನರಿಗೆ ಬದುಕಿನ ಸರಿಯಾದ ದಾರಿಯನ್ನು ತೋರಿಸಿದ್ದರು. ಇಲ್ಲಿಯ ಒಬ್ಬ ಮಹಿಳೆ ಗುರು ತೇಗ್ ಬಹದ್ದೂರ್ ಜೀ ಅವರಿಗೆ ಹಾಲನ್ನು ನೀಡಿ ಇಲ್ಲಿನ ಗ್ರಾಮದ ಕುಷ್ಟರೋಗವನ್ನು ಶಾಶ್ವತವಾಗಿ ಹೋಗಲಾಡಿಸಬೇಕೆಂದು ಮನವಿ ಮಾಡಿದ್ದಳು. ಗುರು ಜೀ ಯವರ ಆಶೀರ್ವಾದದಿಂದ ಅಂದಿನಿಂದ ಈ ಗ್ರಾಮದಲ್ಲಿ ಕುಷ್ಟರೋಗ ಕಾಣದಾಯಿತು. ನಗರದಲ್ಲಿ ಸುಲಭವಾಗಿ ಲಭ್ಯವಿರುವ ಕಾರು ಅಥವಾ ಬಸ್ಸಿನಲ್ಲಿ 25 ನಿಮಿಷಗಳ ಪ್ರಯಾಣದ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ. == ಗುರುದ್ವಾರಾ ವಾಡಾ ಘೌಲುಘರಾ ಸಾಹಿಬ್ == ಗುರುದ್ವಾರಾ ವಾಡಾ ಘೌಲುಘರಾ ಸಾಹಿಬ ಅನ್ನು ಅಫ್ಘನ್ನಿನ ಅಹ್ಮದ್ ಶಾ ದುರಾನಿ, ಸಿರ್ಹಿಂದ್ ನ ಝೈನ್ ಖಾನ್ ಮತ್ತು ಮಲೆರ್ ಕೋಟ್ಲಾ ದ ಭಿಖಾನ್ ಖಾನ್ ನ ಸೈನ್ಯದ ಎದುರು ಹೋರಾಡಿ ವೀರ ಮರಣವನ್ನಪ್ಪಿದ ಸೈನಿಕರ ಸ್ಮರಣಾರ್ಥ ಕಟ್ಟಲಾಗಿದೆ. ಇದು ಮಲೇರ್ ಕೋಟ್ಲಾ ಲುಧಿಯಾನಾ ರಸ್ತೆಯಲ್ಲಿರುವ ರಹಿರಾ ರೈಲ್ವೆ ನಿಲ್ದಾಣದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಕಾರು ಬಸ್ಸು ಅಥವಾ ರಿಕ್ಷಾದಲ್ಲಿ ಸುಲಭವಾಗಿ ತಲುಪಬಹುದಾಗಿದೆ. == ಉಲ್ಲೇಖಗಳು ==